ಗೋಧಿಯನ್ನು ಬಾಧಿಸುವ ಗೆದ್ದಲು ಹುಳುವಿನ ಹತೋಟಿ ಕ್ರಮ!

ಗೋಧಿಯನ್ನು ರಾಜ್ಯದ ಧಾರವಾಡ, ಹಾವೇರಿ, ಗದಗ, ಬಾಗಲಕೋಟ, ವಿಜಯಪುರ, ಬೆಳಗಾವಿ, ಬೀದರ್, ಕಲಬುರ್ಗಿ, ಕೊಪ್ಪಳ, ರಾಯಚೂರು ಹಾಗೂ ಬಳ್ಳಾರಿ ಜಿಲ್ಲೆಗಳಲ್ಲಿ ಖುಷ್ಕಿ ಹಾಗೂ ನೀರಾವರಿಯಲ್ಲಿ ಬೆಳೆಯಲಾಗುತ್ತಿದೆ. ಗೋಧಿಯನ್ನು ಬಾಧಿಸುವ ಗೆದ್ದಲು ಹುಳು ಮತ್ತು ಅವುಗಳ ಹತೋಟಿ ಕ್ರಮಗಳ ಬಗ್ಗೆ ಈ ಲೇಖನದಲ್ಲಿ ತಿಳಿದುಕೊಳ್ಳೋಣ.
#ಗೆದ್ದಲು ಹುಳುಕೀಟ:ಬಾಧೆಯ ಲಕ್ಷಣಗಳು: ಸಾಮಾನ್ಯವಾಗಿ ಗೆದ್ದಲು ಹುಳುಗಳು ಮಣ್ಣಿನ ಪದರನ್ನು ನಿರ್ಮಿಸಿ, ಒಳಗಿನಿಂದ ಬೆಳೆಯನ್ನು ತಿನ್ನುತ್ತವೆ. ತೇವಾಂಶ ಮಣ್ಣಿನಲ್ಲಿ ಕಡಿಮೆಯಾದಾಗ ಗೆದ್ದಲಿನ ಬಾಧೆ ಹೆಚ್ಚು, ಅದರಲ್ಲೂ ಬೇರು ಮತ್ತು ಭೂಮಿಯ ಮಟ್ಟದಲ್ಲಿರುವ ಕಾಂಡದ ಭಾಗವನ್ನು ಮಾತ್ರ ತಿನ್ನುವುದರಿಂದ ಗಿಡಗಳು ಬೇಗ ಒಣಗುತ್ತದೆ. ಇದರಿಂದಾಗಿ ಶೇ. 20-30 ರಷ್ಟು ಬೆಳೆ ಹಾನಿಯಾಗುತ್ತದೆ.
- ಹತೋಟಿ ಕ್ರಮಗಳು:
ಗೆದ್ದಲಿನ ಗೂಡಿನಲ್ಲಿ/ಹೊಲದ ಅಕ್ಕ-ಪಕ್ಕದಲ್ಲಿರುವ ಹುತ್ತದಲ್ಲಿ ರಾಣಿ ಹುಳುವನ್ನು ಗುರುತಿಸಿ ನಾಶಪಡಿಸಬೇಕು. ಆಗಾಗ ಬೆಳೆಗಳಿಗೆ ನೀರು ಹಾಯಿಸುವುದರಿಂದ ಅಥವಾ ಮಣ್ಣಿನಲ್ಲಿ ತೇವಾಂಶ ಕಡಿಮೆಯಾಗದಂತೆ ನೋಡಿಕೊಳ್ಳುವುದು. ಕಪ್ಪು ಮಣ್ಣಿನ ನೀರಾವರಿ ಪ್ರದೇಶಗಳಲ್ಲಿ ಮತ್ತು ತೋಟಗಾರಿಕೆ ಬೆಳೆಗಳಲ್ಲಿ ಅಂತರಬೇಸಾಯ ಮಾಡುವುದರಿಂದ ಗೆದ್ದಲಿನ ಬಾಧೆಯನ್ನು ಕಡಿಮೆ ಮಾಡಬಹುದು. ಹುತ್ತಗಳಿಗೆ ವಿಷಪೂರಿತ ವಸ್ತುಗಳನ್ನು ಹಾಕಿ ಗೆದ್ದಲಿನ ರಾಣಿ ಮತ್ತು ಅದರ ಸಂತತಿಯನ್ನು ನಾಶಪಡಿಸಬೇಕು.
ಬಿತ್ತನೆಗೂ ಮುನ್ನ ಪ್ರತಿ ಕೆಜಿ ಬಿತ್ತನೆ ಬೀಜಕ್ಕೆ 3-4 ಮಿ. ಲೀ ಕ್ಲೋರ್ಪೈರಿಫಾಸ್ 20 ಇಸಿ ಅನ್ನು ಉಪಯೋಗಿಸಿ ಬೀಜೋಪಚಾರ ಮಾಡಬೇಕು. ಒಂದು ಮೀಟರ್ ಸುತ್ತಳತೆ ಇರುವ ಹುತ್ತಕ್ಕೆ 2 ಅಲ್ಯೂಮಿನಿಯಂ ಫಾಸ್ಪೆಂಡ್ ಮಾತ್ರೆಗಳನ್ನು ಹಾಕಿ, ಅದರಿಂದ ಗಾಳಿ ಹೊರಗೆ ಹೋಗದಂತೆ ಎಲ್ಲಾ ರಂಧ್ರಗಳನ್ನು ಹಸಿ ಮಣ್ಣಿನಿಂದ ಮುಚ್ಚಿ ಅಥವಾ ಪ್ರತಿ ಲೀಟರ್ ನೀರಿಗೆ 3.3 ಮಿ. ಲೀ. ಕ್ಲೋರ್ಪೈರಿಫಾಸ್ 20 ಇಸಿ ಯನ್ನು ಸೇರಿಸಿ ಪ್ರತಿ ಹುತ್ತಕ್ಕೆ 18 ಲೀಟರ್ ದ್ರಾವಣವನ್ನು ಹಾಕಬೇಕು. ಕೆಲವು ಸಂದರ್ಭಗಳಲ್ಲಿ ಹುತ್ತದ ಮೇಲೆ ರಂಧ್ರಗಳನ್ನು ಮಾಡಿ ಈ ದ್ರಾವಣವನ್ನು ಸುರಿಯಬೇಕಾಗುತ್ತದೆ.ಗೆದ್ದಲಿನ ಬಾಧೆ ಬೆಳೆಗಳಲ್ಲಿ ಕಂಡು ಬಂದಲ್ಲಿ ಪ್ರತಿ ಲೀಟರ್ ನೀರಿಗೆ 10 ಮಿ.ಲೀ ಕ್ಲೋರ್ಪೈರಿಫಾಸ್ 20 ಇ.ಸಿ. ಯನ್ನು ಸೇರಿಸಿ ಬಾಧೆಗೊಳಗಾದ ಪ್ರದೇಶದಲ್ಲಿ ಮಣ್ಣು ನೆನೆಯುವಂತೆ ಸುರಿಯಬೇಕು. ಶೇ. 10ರ ಎಕ್ಕೆ ಕಷಾಯವನ್ನು ಮಣ್ಣಿಗೆ ಸಿಂಪಡಿಸಬೇಕು.