ಗರಿಕೆ ಕಷಾಯದ ಆರೋಗ್ಯ ಪ್ರಯೋಜನ!

ಗರಿಕೆ ಹುಲ್ಲನ್ನು ಬರಿ ದೇವರಿಗೆ, ಪೂಜೆಗೆ ಮಾತ್ರ ಅರ್ಪಣೆ ಮಾಡುವುದಲ್ಲ ಅದರಿಂದ ಆರೋಗ್ಯಕ್ಕೂ ಸಾಕಷ್ಟು ಉಪಯೋಗಗಳಿವೆ. ಗರಿಕೆ ಹುಲ್ಲನ್ನು ಬಳಸಿ ಯಾವೆಲ್ಲಾ ಅನಾರೋಗ್ಯ ಸಮಸ್ಯೆಗಳನ್ನು ದೂರ ಮಾಡಬಹುದು? ಎನ್ನುವುದನ್ನು ತಿಳಿಯೋಣ.
ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಮಾಲಿನ್ಯದಿಂದಾಗಿ ಅಲರ್ಜಿ, ಅಸ್ತಮಾ ಕೂಡ ಅಧಿಕವಾಗುತ್ತಿದೆ. ಈ ರೋಗಿಗಳು ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಗರಿಕೆ ಹುಲ್ಲಿನ ರಸವನ್ನು 2 ಅಥವಾ 3 ಚಮಚ ಸೇವನೆ ಮಾಡುವುದರಿಂದ ಅಲರ್ಜಿ ಶೀತ, ಅಸ್ತಮಾ ನಿಯಂತ್ರಣಕ್ಕೆ ಬರುತ್ತದೆ. ದೇಹದಲ್ಲಿನ ಅಶುದ್ಧ ರಕ್ತ ಅಧಿಕವಾದಾಗ ಕುರು, ಕಜ್ಜಿಯಂತಹ ಕಾಯಿಲೆಗಳು ಕಾಡುತ್ತವೆ. ಇಂತಹ ಸಮಯದಲ್ಲಿ ರಕ್ತವನ್ನು ಶುದ್ಧೀಕರಿಸಲು ಗರಿಕೆ ಹುಲ್ಲು ಸಹಾಯಕವಾಗಿದೆ. 10 ರಿಂದ 15 ಗರಿಕೆ ಹುಲ್ಲನ್ನು ತಂದು ಮಿಕ್ಸಿ ಮಾಡಿ ಅದರ ರಸವನ್ನು ಒಂದು ತಿಂಗಳ ಕಾಲ ಸೇವನೆ ಮಾಡುತ್ತಾ ಬಂದರೆ ದೇಹದಲ್ಲಿನ ರಕ್ತ ಶುದ್ಧವಾಗುತ್ತದೆ. ಇದರಿಂದ ಕುರು, ಕಜ್ಜಿಯ ಸಮಸ್ಯೆಗಳು ದೂರವಾಗುತ್ತವೆ.
ಗರಿಕೆಯ ಆರೋಗ್ಯ ಪ್ರಯೋಜನಗಳು :
⦿ ಗರಿಕೆಯು ಜೀರ್ಣಕ್ರೀಯೆಯನ್ನು ಉತ್ತಮಗೊಳಿಸುತ್ತದೆ.
⦿ ಶೀತ ಮತ್ತು ಕಫವನ್ನು ನಿವಾರಣೆ ಮಾಡುತ್ತದೆ.
⦿ ಬಾಯಿಯಿಂದ ದುರ್ವಾಸನೆಯಿಂದ ಬರುವ ಸಮಸ್ಯೆ ಇದ್ದರೆ ನಿವಾರಣೆ ಮಾಡುತ್ತದೆ.
⦿ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಸಮತೋಲನದಲ್ಲಿ ಇರಿಸುತ್ತದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಮಹಿಳೆಯರ ಉತ್ತಮ ಆರೋಗ್ಯಕ್ಕೆ: ಮಹಿಳೆಯರು ಪುರುಷರಿಗಿಂತ ಸೂಕ್ಷ್ಮ ಆರೋಗ್ಯವನ್ನು ಹೊಂದಿರುತ್ತಾರೆ. ಮಹಿಳೆಯರಲ್ಲಿ ಗರ್ಭಕೋಶದ ಸಮಸ್ಯೆ, ಮೂತ್ರದಲ್ಲಿ ಸೋಂಕು, ದುರ್ವಾಸನೆಯಿಂದ ಕೂಡಿದ ಬಿಳಿಸ್ರಾವಗಳು ಪದೇ ಪದೇ ಕಾಡುವ ಸಾಧ್ಯತೆಗಳು ಹೆಚ್ಚು. ಇಂತಹ ಸಮಸ್ಯೆ ಇರುವ ಮಹಿಳೆಯರು ಗರಿಕೆ ಹುಲ್ಲಿನ ರಸವನ್ನು ಮೊಸರಿನಲ್ಲಿ ಮಿಶ್ರಮಾಡಿ ಸೇವಿಸಬೇಕು. ಗಣನೀಯವಾಗಿ ಈ ವಿಧಾನವನ್ನು ಅನುಸರಿಸಿದರೆ ಬಿಳಿಸ್ರಾವ, ಮೂತ್ರದ ಸೋಂಕು, ಗರ್ಭಕೋಶದ ಸಮಸ್ಯೆಗಳಾದ ಪಿಸಿಓಡಿ (ಪಾಲಿಸಿಸ್ಟಿಕ್ ಓವೆರೆಸಿ) ಸಮಸ್ಯೆಗಳು ನೈಸರ್ಗಿಕವಾಗಿಯೇ ಪರಿಹಾರ ಕಂಡುಕೊಳ್ಳುತ್ತವೆ. ಪ್ರೊಲ್ಯಾಕ್ಟಿನ್ ಹಾರ್ಮೋನ್ಗಳ ಉತ್ಪಾದನೆಗೆ ಹೆಚ್ಚಿನ ಪ್ರಚೋದನೆ ನೀಡುವುದರಿಂದ ಬಾಣಂತಿಯರು ಇದನ್ನು ಸೇವಿಸಿದರೆ ಹಾಲಿನ ಪ್ರಮಾಣವನ್ನು ಹೆಚ್ಚಿಸಿಕೊಳ್ಳಬಹುದು.
ರಕ್ತ ಶುದ್ಧೀಕರಣಕ್ಕೆ: ಗರಿಕೆಯ ಹುಲ್ಲು ನೈಸರ್ಗಿಕವಾಗಿಯೇ ರಕ್ತ ಶುದ್ಧೀಕಾರಕವಾಗಿ ಕಾರ್ಯನಿರ್ವಹಿಸುವುದು. ರಕ್ತಕಣಗಳು ಆರೋಗ್ಯಕರವಾಗಿರುವಂತೆ ಕಾಪಾಡುವುದು. ಗಾಯ ಮತ್ತು ಅತಿಯಾದ ಮುಟ್ಟಿನ ಸ್ರಾವವನ್ನು ಕಡಿಮೆ ಮಾಡಲು ಗರಿಕೆಯ ಮೊರೆ ಹೋಗಬಹುದು. ಇದು ದೇಹದಿಂದ ಉಂಟಾಗುವ ರಕ್ತ ನಷ್ಟವನ್ನು ಬಹುಬೇಗ ನಿಯಂತ್ರಿಸುವುದು. ಕೆಂಪು ರಕ್ತ ಕಣಗಳನ್ನು ಹೆಚ್ಚಿಸುವುದರ ಜೊತೆಗೆ ಹಿಮೋಗ್ಲೋಬಿನ್ ಮಟ್ಟ ಹೆಚ್ಚುವಂತೆ ಮಾಡಿ, ರಕ್ತ ಹೀನತೆಯನ್ನು ತಡೆಯುವುದು.