ಪರಿಸರ ಉಳಿಸಿ ಮಾನವ ಬದುಕನ್ನು ಹಸಿರಾಗಿಸೋಣ ಬನ್ನಿ.

ಭೂ ಸಂಪನ್ಮೂಲಗಳಾದ ಅರಣ್ಯ , ಮಣ್ಣುಗಳ, ನದಿಯಲ್ಲಿಯ ಉಸುಕು, ಕಲ್ಲುಬೆಟ್ಟಗಳನ್ನು ಸಂರಕ್ಷಿಸುವುದು, ಜೈವಿಕ ತಂತ್ರಜ್ನಾನವನ್ನು, ಅಪಾಯಕಾರಕ ತ್ಯಾಜ್ಯಗಳನ್ನು ಪರಿಸರ ತತ್ವಗಳ ಚೌಕಟ್ಟಿಗೆ ಹೊಂದಿಸಿ ಬಳಸುವುದರ ಮಹತ್ವವನ್ನು ಸಾಮಾನ್ಯ ನಾಗರಿಕರೂ ಅರಿಯಬೇಕು. ಇದಕ್ಕಾಗಿ ನಾವು ನಮ್ಮ ನಾಳಿನ ನಾಗರಿಕರಾದ ಮಕ್ಕಳಿಗೆ ಕೂಡ ಶಾಲೆಗಳಲ್ಲಿ ಈ ಬಗ್ಗೆ ಕಡ್ಡಾಯವಾಗಿ ಪರಿಸರ ಶಿಕ್ಷಣ ಕೊಡಬೇಕು. ಮಕ್ಕಳಲ್ಲಿ ಪರಿಸರ ಪ್ರೇಮ ಮತ್ತು ಪರಿಸರ ನಾಶದಿಂದಾಗುವ ದುಷ್ಟರಿಣಾಮಗಳ ಕುರಿತು ತಿಳಿಸುವ ಕೆಲಸ ಮಾಡಿದರೆ, ಮುಂದಿನ ದಿನಗಳಲ್ಲಿ ಇದರ ಉತ್ತಮ ಫಲಿತಾಂಶ ಸಿಗುತ್ತದೆ. ಪಠ್ಯ ಪುಸ್ತಕದಲ್ಲೂ ಪರಿಸರ ಸಂರಕ್ಷಣೆಯ ಶಿಕ್ಷಣಕ್ಕೆ ಒತ್ತು ನೀಡಬೇಕು.
ಪರಿಸರ ಶಿಕ್ಷಣ ನಮ್ಮ ಸುತ್ತಮುತ್ತಲಿನ ಪರಿಸರ ಸಮಸ್ಯೆಗಳನ್ನು ಗುರುತಿಸಿ ಆ ಸಮಸ್ಯೆಗಳಿಗೆ ಪರಿಹಾರ ಹುಡುಕುವ ಸಾಮರ್ಥ್ಯವನ್ನು ಬಲಪಡಿಸುವ ಒಂದು ಕಲಿಕೆಯ ಸಾಧನವಾಗಿದೆ. ಮಕ್ಕಳು ಇಂಥ ದಿನಾಚರಣೆಗಳಂದು ಘೋಷಣೆಗಳನ್ನು ಬರೆದು ಪ್ರಚಾರಮಾಡಬೇಕು. ಪರಿಸರ ರಕ್ಷಣೆಯ ಈ ಘೋಷಣೆಗಳು ಒಂದು ದಿನದ ಘೋಷಣೆಗಳಾಗಿಯೇ ಉಳಿಯದೆ, ಆಚರಣೆಗೂ ಬರುವಂತಾಗಬೇಕು. ಮನೆ ಆವರಣ ಮತ್ತು ಲಭ್ಯ ಸ್ಥಳಗಳಲ್ಲಿ ಸಸಿ ನೆಟ್ಟು ಬೆಳೆಸುವ ಮೂಲಕ ಎಲ್ಲರೂ ಪರಿಸರ ರಕ್ಷಣಾ ಕಾರ್ಯದಲ್ಲಿ ತೊಡಗಬೇಕು. ಈ ವಿಷಯದಲ್ಲಿ ಸಾಲುಮರದ ತಿಮ್ಮಕ್ಕ ನಮಗೆ ಮಾದರಿ. ಪ್ರತಿಯೊಬ್ಬ ನಾಗರಿಕರಲ್ಲೂ ಪರಿಸರದ ಬಗ್ಗೆ ಈ ಜಾಗೃತಿ ಮೂಡಬೇಕು. ಕೇವಲ ವರ್ಷಕ್ಕೆ ಒಂದು ದಿನ ಪರಿಸರ ರಕ್ಷಣೆಯೆಂಬುದು ಸೀಮಿತವಾಗಬಾರದು. ವರ್ಷದ ಪ್ರತಿ ದಿನವೂ ನಮಗೆ ಪರಿಸರ ದಿನವಾಗಬೇಕು. ಏಕೆಂದರೆ ಪರಿಸರ ನಮ್ಮ ಜೀವನದ ಅವಿಭಾಜ್ಯ ಅಂಗ. ಪರಿಸರವಿಲ್ಲದೆ ಮಾನವನಿಲ್ಲ ಎಂಬ ನಿತ್ಯ ಸತ್ಯವನ್ನು ನಾವಿಂದು ನಮ್ಮ ಜೀವನದ ಗುರಿಯನ್ನಾಗಿಸಿಕೊಂಡು ಪರಿಸರ ಸಂರಕ್ಷಣೆಯತ್ತ ಮುನ್ನಡೆಯೋಣ. ವೇಗದ ಬದುಕಿನಲ್ಲಿ ಪರಿಸರ ಕಡೆಗಣಿಸುತ್ತಿರುವ ಮಾನವನ ಜೀವನ ಶೈಲಿ ಮುಂದೊಂದು ದಿನ ಅವನಿಗೇ ಮುಳ್ಳಾಗಬಹುದು,
ಮನುಷ್ಯ ಪರಿಸರದ ಮೇಲೆ ನಡೆಸುತ್ತಿರುವ ದೌರ್ಜನ್ಯ ನಿಲ್ಲಿಸದಿದ್ದರೆ ಜೀವಿಗಳ ಆರೋಗ್ಯದ ಮೇಲೆ ಪ್ರತಿಕೂಲ ಪ್ರಭಾವ ಉಂಟಾಗುತ್ತದೆ,