ಇದ್ದಕ್ಕಿದ್ದಂತೆ ಬಂದು ಕಾಡುವ ಜ್ವರಕ್ಕೆ ಇಲ್ಲಿದೆ ಮನೆಮದ್ದು

ಮಳೆಗಾಲ ಆರಂಭವಾಗಿದೆ ಅನೇಕ ದೈಹಿಕ ತೊಂದರೆ ಉಲ್ಬಣಗೊಳ್ಳುವುದು ಮಾಮೂಲಿ, ಅದರಲ್ಲೂ ಜ್ವರ ಚಳಿ ಜ್ವರ ಕಾಡದೆ ಇರದು, ವಾತಾವರಣದ ಬದಲಾವಣೆ ಮತ್ತು ನೀರಿನ ಬದಲಾವಣೆಯಿಂದ ಶೀತ ನಂತರ ಜ್ವರ ಕಾಣಿಸಿಕೊಳ್ಳುವುದು ಸಹಜ. ಕೆಲವು ಬಾರಿ ಇದ್ದಕ್ಕಿದ್ದಂತೆ ವಿಪರೀತ ಜ್ವರ ಬಂದರೆ ತಕ್ಷಣ ಆಸ್ಪತ್ರೆಗೆ ಹೋಗುವ ಮೊದಲು ಒಮ್ಮೆ ಮನಮದ್ದನ್ನು ಟ್ರೈ ಮಾಡಿ ನೋಡಿ, ಪರಿಸ್ಥಿತಿ ಕೈಮೀರುತ್ತಿದೆ ಎಂದೆನಿಸಿದರೆ ಮಾತ್ರ ಆಸ್ಪತ್ರೆ ಕಡೆ ಮುಖ ಮಾಡಿ. ಹಾಗಾದರೆ ಜ್ವರಕ್ಕೆ ಮನೆಯಲ್ಲೇ ಹೇಗೆ ಚಿಕಿತ್ಸೆ ಮಾಡಿಕೊಳ್ಳಬಹುದು ಎಂಬುದಕ್ಕೆ ಇಲ್ಲಿದೆ ನೋಡಿ ಉತ್ತರ.
ಮೈಕೈ ನೋವು, ತಲೆನೋವು, ಮೈ ಬಿಸಿಯಾಗುವುದು ಇವೆಲ್ಲ ಲಕ್ಷಣಗಳು ಕಂಡು ಬರುತ್ತದೆ. ಎಷ್ಟೋಬಾರಿ ಅಧಿಕ ಶ್ರಮದ ಕೆಲಸ, ಮಾನಸಿಕ ಒತ್ತಡ ಹೆಚ್ಚಾಗುವುದರಿಂದ, ಅಜೀರ್ಣದಿಂದ, ಭಯ ದಿಂದ ಜ್ವರ ಕಾಣಿಸಿಕೊಳ್ಳಬಹುದು. ಇಂತಹ ಜ್ವರ ವಿಶ್ರಾಂತಿ, ಪಥ್ಯ ಮತ್ತು ಮನೆ ಔಷಧಿಯಿಂದ ಕಡಿಮೆ ಯಾಗುತ್ತದೆ. ಆದರೆ ಯಾವುದಾದರೂ‘ಸೋಂಕು’ ಉಂಟಾಗಿ ಜ್ವರ ಬಂದಿದ್ದಲ್ಲಿ ಚಿಕಿತ್ಸೆಯ ಅದರಲ್ಲಿಯೂ ಜೀವಿರೋಧಕಗಳ ಆವಶ್ಯಕತೆಯಿರುತ್ತದೆ. ಜ್ವರ ಕೆಲವು ಕಾಯಿಲೆಗಳ ಲಕ್ಷಣವಾಗಿರಲೂಬಹುದು. ಜ್ವರ ದೇಹದಲ್ಲಿ ಉಂಟಾಗಿರುವ ಸೋಂಕಿನ ವಿರುದ್ಧ ಹೋರಾಡುವ ರಕ್ಷಣಾ ವ್ಯವಸ್ಥೆಯ ವಿಧಾನವೂ ಆಗಿರುತ್ತದೆ.
# ಜ್ವರವಿರುವಾಗ ಗಟ್ಟಿ ಆಹಾರ ಕ್ಕಿಂತ ದ್ರವಾಹಾರ ಸೇವನೆ ಒಳ್ಳೆಯದು. ಹಣ್ಣಿನ ರಸಗಳು. ಮೂಸಂಬಿ, ಕಿತ್ತಳೆ ರಸ ಮತ್ತು ತರಕಾರಿಗಳ ಸೇವನೆ ಒಳ್ಳೆಯದು. ಕ್ಯಾರೆಟ್ ಮತ್ತು ಬೀರ್ರೂಟ್ ರಸಗಳನ್ನು ಕುಡಿಯಬೇಕು
# ಕರಿಮೆಣಸು, ಜೀರಿಗೆ, ಶುಂಠಿ, ಧನಿಯಾಗಳನ್ನು ಕುಟ್ಟಿಪುಡಿ ಮಾಡಿ ಕಷಾಯ ತಯಾರಿಸಿ ಕುಡಿಯಬೇಕು. ಜ್ವರವಿದ್ದಾಗ ಇದನ್ನು ಕುಡಿಯುವುದ ರಿಂದ ಬೆವರು ಬಂದು ದೇಹ ತಂಪಾಗುತ್ತದೆ. ತುಳಸಿ ಬೀಜ, ಮಜ್ಜಿಗೆ ಹುಲ್ಲು, ನಿಂಬೆಹುಲ್ಲನ್ನು ಹಾಕಿ ತಯಾರಿ ಸಿದ ಟೀ ಕುಡಿಯಬೇಕು.
# ಹಣೆಯ ಮೇಲೆ ತಣ್ಣೀರಿನಲ್ಲಿ ಅದ್ದಿದ ದಪ್ಪನೆಯ ಬಟ್ಟೆಯ ಪಟ್ಟಿಯನ್ನು ಹಾಕಬೇಕು. ಹೆಚ್ಚು ಜ್ವರವಿದ್ದಲ್ಲಿ ಬಟ್ಟೆಯನ್ನು ತಣ್ಣೀರಿನಲ್ಲಿ ಅದ್ದಿ ಮೈಯನ್ನೆಲ್ಲ ಒರೆಸಬೇಕು.
# ಒಂದು ಹಿಡಿ ಅಮೃತಬಳ್ಳಿಯನ್ನು ಜಜ್ಜಿ 4 ಲೋಟ ನೀರಿನಲ್ಲಿ ಹಾಕಿ ಕುದಿಸಿ ಒಂದು ಲೋಟಕ್ಕೆ ಇಳಿದ ಮೇಲೆ ಕಷಾಯವನ್ನು ಶೋಧಿಸಿ, ದಿನಕ್ಕೆ ಮೂರ್ನಾಲ್ಕು ಬಾರಿ 50 ಮಿಲಿ ಕುಡಿಯಬೇಕು. ಮಕ್ಕಳಿಗೆ 25 ಮಿಲಿ ಕೊಟ್ಟಲ್ಲಿ ಸಾಕಾಗುತ್ತದೆ. ದೊಡ್ಡಪತ್ರೆಯ 6 ಎಲೆಗಳನ್ನು ಕೆಂಡದ ಮೇಲೆ ಬಾಡಿಸಿ ರಸ ತೆಗೆದು ಕುಡಿಯಬೇಕು. ಇದನ್ನು ನಾಲ್ಕೈದು ಗಂಟೆಗಳಿಗೊಮ್ಮೆ ಜ್ವರ ಕಡಿಮೆಯಾಗುವವರೆಗೂ ಕುಡಿಯಬೇಕು. ಮಕ್ಕಳಿಗೆ ಒಂದು ಚಮಚ ರಸವನ್ನು ಜೇನುತುಪ್ಪ ಬೆರೆಸಿ ಕುಡಿಸಬೇಕು. ಆಡು ಸೋಗೆಯ ಎಲೆಗಳನ್ನು ತೊಳೆದು ಸ್ವಚ್ಛ ಗೊಳಿಸಿ ಒಂದು ಲೋಟ ನೀರಿನಲ್ಲಿ ಹಾಕಿ ಅರ್ಧಲೋಟ ಆಗುವವರೆಗೂ ಸಣ್ಣಗಿನ ಉರಿಯಲ್ಲಿ ಕುದಿಸಿ ಬೆಲ್ಲ ಹಾಕಿ ನಾಲ್ಕು ಚಮಚೆಯಷ್ಟು ದಿನಕ್ಕೆ ನಾಲ್ಕು ಬಾರಿ ಕುಡಿಯ ಬೇಕು. ಚಿಕ್ಕಮಕ್ಕಳಿಗೆ ಎರಡು ಚಮಚೆ ಕುಡಿಸಬೇಕು.
# ವೈರಸ್ನಿಂದ ಉಂಟಾಗುವ ಫ್ಲೂ ಜ್ವರದಲ್ಲಿ ಸಾಮಾನ್ಯವಾಗಿ ಗಂಟಲು ನೋವು, ಕೆಮ್ಮು, ನೆಗಡಿ, ತಲೆನೋವು, ತಲೆಭಾರ ಮತ್ತು ಮೈಕೈ ನೋವು ಇರುತ್ತದೆ. ವಿಶ್ರಾಂತಿಯೇ ಈ ಜ್ವರಕ್ಕೆ ಅತ್ಯುತ್ತಮ ಮದ್ದು. ಹಿಪ್ಪಲಿ ಮತ್ತು ಶುಂಠಿಯನ್ನು ಸಮಪ್ರಮಾಣ ತೆಗೆದುಕೊಂಡು ಕುಟ್ಟಿ ಪುಡಿ ಮಾಡಿ ಕಷಾಯ ತಯಾರಿಸಿ ಎರಡು ಚಮಚೆಯಷ್ಟನ್ನು ದಿನಕ್ಕೆ ಮೂರು ಬಾರಿ ಮೂರು ದಿನ ಕುಡಿಯಬೇಕು. ನುಗ್ಗೆ ಸೊಪ್ಪಿನಿಂದ ಸಾರು ತಯಾರಿಸಿ ಅದಕ್ಕೆ ಸ್ವಲ್ಪ ಬೆಳ್ಳುಳ್ಳಿರಸ ಬೆರೆಸಿ ಕುಡಿಯಬೇಕು.ಅಮೃತಬಳ್ಳಿ, ಶುಂಠಿ, ನೆಲಗುಳ್ಳದ ಸಮಪ್ರಮಾಣ ಕುಟ್ಟಿ ಕಷಾಯ ತಯಾರಿಸಿ ಬೆಳಗ್ಗೆ, ಮಧ್ಯಾಹ್ನ ಹಾಗೂ ರಾತ್ರಿ 5ರಿಂದ 6ದಿನಗಳ ಕಾಲ ದುಡಿಯಬೇಕು. 100 ಗ್ರಾಂ ಲಕ್ಕಿಸೊಪ್ಪು, 10 ಗ್ರಾಂ ಕಾಳುಮೆಣಸು, 10 ಗ್ರಾಂ ಬೆಲ್ಲ ಇವುಗಳನ್ನು ಅರ್ಧ ಲೀಟರ್ ನೀರಿನಲ್ಲಿ ಹಾಕಿ ಕುದಿಸಿ 1/4 ಲೀಟರ್ ನೀರಿಗೆ ಇಳಿಸಬೇಕು.
ಕಷಾಯವನ್ನು ಶೋಧಿಸಿ ಹೊತ್ತಿಗೆ ಒಂದು ಲೋಟದಂತೆ ದಿನಕ್ಕೆರಡು ಬಾರಿ ಕುಡಿಯಬೇಕು. ಒಂದು ಲೋಟ ಬಿಸಿನೀರಿಗೆ ಅರ್ಧ ಚಮಚೆ ಅರಿಶಿನ, 5 ಕಾಳುಮೆಣಸು ಪುಡಿ ಸೇರಿಸಿ ದಿನಕ್ಕೆರಡು ಬಾರಿ ಖಾಲಿ ಹೊಟ್ಟೆಗೆ ಕುಡಿಯಬೇಕು.